#ಧಾರಾ_ರಾಮಾಯಣ - 05-07-2019 ದಿನ16
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಜೀವರುಗಳ ಭಾವ ದೇವರಿಗೆ ವೇದ್ಯವಾಗುತ್ತದೆ. ಗಂಗೆಯ ಭಾವ ಶಿವನಿಗೆ ಗೊತ್ತಾಯಿತು. ಗಂಗೆಯ ಭಾವವೇನೆಂದರೆ ಯಾರಾದರೂ ಅಡ್ಡ ಬಂದರೆ ಪಾತಾಳಕ್ಕೆ ತೆಗೆದುಕೊಂಡು ಹೋಗುತ್ತೇನೆ. ಶಿವನೇ ಬಂದರೂ ಸಹ...! ಪ್ರವಾಹದ ರಭಸದಲ್ಲಿ ಪಾತಾಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬುದು ಗಂಗಾಗರ್ವದ ಭಾವನೆ. ಶಿವನಿಗೆ ತಾನಾಗಿಯೇ ಗೊತ್ತಾಯಿತು...!
"ನಾವು ಏನೇ ಭಾವಿಸಿದರೂ ದೇವರಲ್ಲಿ ವೇದ್ಯವಾಗುತ್ತದೆ ಎಂದು ನಮ್ಮ ಮನಸ್ಸಿನಲ್ಲಿ ದೃಢವಾದರೆ, ನಾವು ಎಂದೂ ಒಳ್ಳೆಯವರೇ ಆಗಿರುತ್ತೇವೆ."
ಗಂಗೆ ರಭಸದಿಂದ ಧುಮುಕಿದಾಗ, ಶಿವನು ತನ್ನ ಜಟಾಮಂಡಲವನ್ನು ಬಿಚ್ಚಿದನು. ಪರಿಣಾಮ ಅವಳಿಗೆ ಹೊರಬರಲಾಗಲಿಲ್ಲ. ಸೊಕ್ಕು ಮಾಡಬಾರದು, ಮುಂದಿನ ದಾರಿಯೇ ಜಡಕಾಗುವುದು. ಮಾಡಬೇಕಾದ್ದನ್ನ ಮಾಡದಿದ್ದರೆ ಆಗಬೇಕಾಗದ್ದು ಆಗುವುದಿಲ್ಲ...
ಶಿವನ ಕುರಿತು ಭಗೀರಥ ಮಹಾತಪಸ್ಸು ಮಾಡುತ್ತಾನೆ. ಶಿವ ಗಂಗೆಯನ್ನು ಬಿಟ್ಟುಕೊಟ್ಟ. ಹರಿದ ಗಂಗೆ ಏಳುಶಾಖೆಯಾದಳು. ಮೂರು ಉತ್ತರಕ್ಕೆ, ಇನ್ನೂಮೂರು ದಕ್ಷಿಣಕ್ಕೆ. ಇನ್ನೊಂದು "ಅಲಕನಂದಾ". ಇದು ಭಗೀರಥನಿಗೆ ಸಿಕ್ಕಿದ್ದು. ಗಂಗಾವತರಣ ಭುವಿಯಲ್ಲಾಯಿತು...!
ಭಗೀರಥನನ್ನು ಗಂಗೆ ಹಿಂಬಾಲಿಸುವ ದಾರಿಯಲ್ಲಿ ಒಬ್ಬ ಜಹ್ನು ಯಜ್ಞವನ್ನು ಮಾಡುತ್ತಾ ಇದ್ದ. ಗಂಗೆ ಯಜ್ಞಾಮಂಡಲದೊಳ ಹೊಕ್ಕಿ, ಜಹ್ನುವಿನ ಕೊಪಕ್ಕೊಳಗಾದಳು. ಆತ ಗಂಗೆಯನ್ನು ಕುಡಿದನು...! ದೇವಗಣಗಳು ಮಹರ್ಷಿಗಳು ಜಹ್ನುವಿನ ಮನವೊಲಿಸಿದರು. ಮಗಳು ಎಂದು ಗಂಗೆಯನ್ನು ಒಪ್ಪಿಕೊಂಡು, ಬಾಯಿಂದ ಕುಡಿದ ಗಂಗೆಯನ್ನು, ಕಿವಿಯಿಂದ ಹೊರಬಿಟ್ಟನು ಜಹ್ನು. ಅದಕ್ಕಾಗಿಯೇ "ಜಾಹ್ನವಿ" ಎನ್ನುವ ಹೆಸರು ಬಂತು.
ಭಗೀರಥನು ಸಗರವಂಶಜರು ಗಂಗೆಗಾಗಿ ನಿರ್ಮಿಸಿದ ಜಾಗಕ್ಕೆ ಬಂದು ತನ್ನ ಉದ್ದೇಶವನ್ನು ಹೇಳಿದನು. ಭಸ್ಮಕ್ಕೆ ಗಂಗಾಸ್ಪರ್ಶವಾದಾಗ ಸಗರತನಯರು ಸ್ವರ್ಗಸ್ಥರಾದರು. "ಭಗೀರಥಪ್ರಯತ್ನ"ವೆಂದೇ ಹೆಸರಾಯಿತು. ಬ್ರಹ್ಮ ಪ್ರಕಟವಾಗಿ, ಇವಳು ನಿನ್ನ ಮಗಳು ಎಂದ ಕಾರಣ, ಗಂಗೆಯನ್ನು "ಭಾಗಿರಥೀ" ಎನ್ನುವರು.
ಈ ಗಂಗಾವತರಣದ ಕಥೆಯನ್ನು ವಿಶ್ವಾಮಿತ್ರರು ರಾಮನಿಗೆ ಹೇಳುತ್ತಾರೆ. ಗಂಗಾವತರಣದ ಕಥೆಯನ್ನು ಕೇಳಿದರೆ ಪಾಪವೆಲ್ಲ ಮುಕ್ತಿ, ಸಂತಾನಪ್ರಾಪ್ತಿ, ಎಲ್ಲ ರೀತಿಯ ಒಳ್ಳೆಯದಾಗುತ್ತದೆ. ಕಥೆಕೇಳಿದ ರಾಮನಿಗೆ ವಿಸ್ಮಯ ವಿಸ್ಮಯ...!
ಗಂಗೆಯನ್ನು ದಾಟಿ, ಮುಂದೆ ಹೋದಾಗ ಅಲ್ಲೊಂದು ನಗರ, ವಿಶಾಲನಗರ. ಆ ನಗರ ಕೃತಯುಗದ ಕಥೆಗೆ ಸಾಕ್ಷಿ. ದಿತಿಯ ಮಕ್ಕಳು ದಾನವರು, ಅದಿತಿಯ ಮಕ್ಕಳು ದೈವೀಸಂಭೂತರು. ಮುಪ್ಪಿಲ್ಲದ, ಸಾವಿರದಂಥವರಾಗಬೇಕೆಂಬ ಆಸೆಗೆ ಇವರಿಬ್ಬರ ಮಧ್ಯ ನಡೆದ ಜಗಳ ಸಮುದ್ರಮಥನಕ್ಕೆ ಕಾರಣವಾಯಿತು. ದೈವೀಸಂಭೂತರಿಗೆ ಜಯಸಿಕ್ಕ ಕಾರಣ ದೇವೇಂದ್ರನಿಗೆ ಇಂದ್ರ ಪದವಿ ಸಿಕ್ಕಿತು...
ದಿತಿ ದೇವೇಂದ್ರನನ್ನು ಸಂಹರಿಸಲು ಚೈತನ್ಯರೂಪಿ ಮಗನನ್ನು ತನ್ನ ಗಂಡನಾದ ಕಶ್ಯಪರಲ್ಲಿ ಕೇಳಿದಳು. ಸಹಸ್ರವರ್ಷಗಳ ಕಾಲ ಶುಚಿಯಾಗಿ ತಪಸ್ಸು ಮಾಡಿದರೆ ಸಂಕಲ್ಪಪ್ರಾಪ್ತಿ ಎಂದರು ಕಶ್ಯಪರು. ಅವಳ ಸೇವೆಗೆ ಇಂದ್ರನೇ ಬಂದನು. ಆತ ಮಾಡಿದ ಸೇವೆಗೆ ಆತನಲ್ಲಿ ಮಮತೆಯುಂಟಾಯಿತು. ಸಹಸ್ರವರ್ಷ ತಪಸ್ಸಿನ ಕೊನೆಯಲ್ಲಿ ಅಶುಚಿಯಾದ ದಿತಿ ಸಪ್ತಮಾರುತರಿಗೆ ಜನ್ಮವಿತ್ತಳು. ಇಂದ್ರ ದಿತಿ ಒಟ್ಟಿಗೆ ಸ್ವರ್ಗಸೇರಿದರು...
ಆ ನಗರವಿದು ಎಂದು ವಿಶ್ವಾಮಿತ್ರರು ರಾಮನಿಗೆ ಹೇಳಿದರು. ರಾಮನ ಪೂರ್ವಜ ಇಕ್ಷ್ವಾವಿನ ಮಗ ವಿಶಾಲನು ಆಳುತ್ತಿದ್ದ ನಗರವಿದು, ವಿಶಾಲನಗರಿ. ಇಕ್ಷ್ವಾಕುವಂಶಜ ಸುಮತಿ ಈಗಿನ ದೊರೆ. ಪರಮಸತ್ಕಾರವನ್ನು ಸ್ವೀಕಿರಸಿ, ವಿರಮಿಸಿದರು ರಾಮಲಕ್ಷ್ಮಣರು. ಮರುದಿನ ಮಿಥಿಲೆಗೆ ಹೊರಟರು. ಮಿಥಿಲೆಯ ಆರಂಭದಲ್ಲಿ ಅದ್ಭುತವಾದ ಉದ್ಯಾನ. ಆದರೆ ಅಲ್ಲಿರುವ ಒಂದು ಋಷ್ಯಾಶ್ರಮವು ತಿಲಕವಿಲ್ಲದ ಹಣೆಯಂತಿತ್ತು. ಅದು ಯಾಕೆ ಹೀಗೆ ಎನ್ನುವುದನ್ನು ನಾಳಿನ ಪ್ರವಚನದಲ್ಲಿ ಕೇಳೋಣ.
#DhaaraRaamayan

No comments:
Post a Comment
Please leave your comments here.....