#ಧಾರಾ_ರಾಮಾಯಣ - ದಿನ 4
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಮಹತ್ತಾದ ಸಂಗತಿಗಳನ್ನು ನಿರ್ಮಿಸುವವರು ದುರ್ಲಭ, ನಿರ್ಮಾಣವಾದ ಮಹತ್ತನ್ನು ಪ್ರಯೋಗಿಸುವವರು ಇನ್ನೂ ದುರ್ಲಭ. ಮಹತ್ತಾದ ಶಕ್ತಿ ಬೇಕು ಅದಕ್ಕೆ.
ಒಬ್ಬರ ಮುಂದೆ ರಾಮಾಯಣವನ್ನು ಹೇಳುವುದು ಅಂದರೆ ಅದೊಂದು ಚಿಕಿತ್ಸೆ; ಜೀವಕ್ಕೆ ಮಾಡುವ ಚಿಕಿತ್ಸೆ! ರಾವಣ, ಶೂರ್ಪಣಖಿಯರ ಗುಣಗಳನ್ನು ಕಳೆದು ರಾಮ ಹಾಗೂ ಅವನ ಬಳಗದ ಗುಣಗಳನ್ನು ಮೈಗೂಡಿಸುತ್ತದೆ! ಸರಿಯಾಗಿ ಅದರ ಪ್ರಯೋಗವಾದಲ್ಲಿ ಜೀವದ ಪಾಪವನ್ನದು ಕಳೆಯುತ್ತದೆ, ಎಲ್ಲೋ ಇದ್ದ ಜೀವವನ್ನು ಎತ್ತಿ ರಾಮಚರಣವನ್ನು ಸೇರಿಸುತ್ತದೆ! ಹಾಗಾಗಿ ಅದನ್ನು ಪ್ರಯೋಗಿಸುವ ರೀತಿ ಅತಿ ಮುಖ್ಯ!
ರಾಮಾಯಣ ನಿರ್ಮಾಣ ಎಷ್ಟು ಕ್ಲಿಷ್ಟವೋ, ರಾಮಾಯಣ ಪ್ರಯೋಗವೂ ಅಷ್ಟೇ ಕ್ಲಿಷ್ಟ! ವಾಲ್ಮೀಕಿಗಳ ಚಿಂತೆಗೆ ಪರಿಹಾರದಂತೆ ಅಲ್ಲೇ ಮುನಿವೇಷದಲ್ಲಿದ್ದ ಇಬ್ಬರು ಬಾಲಕರು ಬಂದು ಅವರಿಗೆ ನಮಸ್ಕರಿಸುತ್ತಾರೆ. ಅವರನ್ನು ಕಂಡಾಗ ವಾಲ್ಮೀಕಿಗಳಿಗೆ - 'ರಾಮಾಯಣವನ್ನು ಪ್ರಪಂಚದ ಮುಂದಿಡಲು ಇವರು ದ್ವಾರ' ಎಂದೆನಿಸಿತು!
ವೇದಗಳ ಸಂಪೂರ್ಣ ಸಂದೇಶ ರಾಮಾಯಣದಲ್ಲಿ ಇದೆ
ರಾಮಾಯಣಕ್ಕೆ ರಾಮನ ಗತಿ, ಸೀತೆಯ ಚರಿತ್ರೆ, ರಾವಣನ ವಧೆ ಎಂಬ ಮೂರು ಹೆಸರುಗಳು.
ತಾನೊಬ್ಬನಾಗಿ ಬಂದು ಮಾಡಿದ್ದನ್ನು, ಇಬ್ಬರಾಗಿ ಬಂದು ಹಾಡಿದ!
ರಾಮನು ತಾನೊಬ್ಬನಾಗಿ ಬಂದು ಮಾಡಿದ್ದನ್ನು, ಅಂದರೆ ರಾಮಾಯಣವನ್ನು; ಲವ-ಕುಶರಿಬ್ಬರಾಗಿ ಬಂದು ಹಾಡಿದ! ~ ಶ್ರೀಸೂಕ್ತಿ
ಬಾಲರಾಮನು ಆಡಿದಲ್ಲಿ, ರಾಮಬಾಲರು ಹಾಡಿದರು. ಅಯೋಧ್ಯೆಯಲ್ಲಿ ಲವ-ಕುಶರ ರಾಮಾಯಣ ಗಾಯನಕ್ಕೆ ಮೆಚ್ಚದ, ಶ್ಲಾಘಿಸದ ಬೀದಿಯೇ ಇರಲಿಲ್ಲ. ಅಯೋಧ್ಯೆಗೆ ಅಯೋಧ್ಯೆಯೇ ಮಾರುಹೋಗಿತ್ತು ಲವಕುಶರ ರಾಮಾಯಣಕ್ಕೆ.
ರಾಮನ ಅಮೃತ ದೃಷ್ಟಿ ಬಿತ್ತು ಆ ಮಕ್ಕಳ ಮೇಲೆ, ರಾಮನಿಗೆ ಅದೇನೋ ಒಂದು ಅನೀರ್ವಚನಿಯ ಆಕರ್ಷಣೆ. ರಾಮ ಆ ಮಕ್ಕಳನ್ನು ತನ್ನ ಮನೆಗೆ ಆಹ್ವಾನಿಸಿ, ಪೂಜಿಸ್ತಾನೆ. ಸಭೆಯೊಂದನ್ನು ಏರ್ಪಡಿಸಿ ಆ ಮಕ್ಕಳು ಪರಮಾದ್ಭುತವಾಗಿ ಹಾಡಿದ ರಾಮಾಯಣ ಕೇಳಿ ಅವರನ್ನು ಪ್ರೋತ್ಸಾಹಿಸಿದನು. ತಾನೆ ಕಥಾನಾಯಕನಾಗಿರುವ ಕಥೆಯನ್ನು ತನ್ನ ಮಕ್ಕಳಿಂದ ತನ್ನ ಮನೆಯಲ್ಲಿ ಕೇಳಿ ರಾಮ ತನ್ನ ತನದಲ್ಲಿ ಮುಳುಗಿಹೋಗುವ ಸಂದರ್ಭ ಎಷ್ಟು ಸೊಗಸು!
ನನ್ನತನದಲ್ಲಿ, ನನ್ನ ಮೂಲತ್ವದಲ್ಲಿ ನಾನು ಕರಗಿ ಹೋಗ್ತಿದ್ದೇನೆ - ರಾಮನ ಮಾತುಗಳಿವು!!
#DhaaraRaamayan

No comments:
Post a Comment
Please leave your comments here.....